ಹರಿಯಂಶ ತಳೆದಿಹ ಮೂರನೆಯವತಾರ
ಹರಿನಾಮವನು ಸಾರಿದವರು|
ಹರಿಸೇವೆ ಮಾಡಲು ಬುವಿಯಲ್ಲಿ ಜನಿಸಿದ
ಗುರು ಮಧ್ವಾಚಾರ್ಯರು ಇವರು||
ಕಡಲಿನ ಮೂಲಕ ಹಡಗಲ್ಲಿ ಬಂದಿಹ
ಕಡೆಗೋಲಿನವನ ಕಂಡವರು|
ಉಡುಪಿ ಕ್ಷೇತ್ರದಿ ಕೃಷ್ಣನಿಗೆ ಗುಡಿ ಕಟ್ಟಿದ
ಪೊಡವಿಗೊಡೆಯನ ಭಜಕರು||
ಜ್ಞಾನದ ಚಿಲುಮೆಯು ಶರಣರ ಪೊರೆವರು
ಆನಂದ ತೀರ್ಥ ಮುನಿಗಳು|
ಶ್ರೀನಾಥನನು ಪೂಜಿಸಲು ಬಾಲ ಯತಿಗಳ
ತಾ ನಿಂತು ನೇಮಿಸಿದವರು||
ವರಸೃಷ್ಟಿ ದಿಟವೆಂದು ಲೋಕಕ್ಕೆ ಪೇಳಿದ
ಗುರುವಚ್ಯುತರ ಶಿಷ್ಯರಿವರು|
ಬರೆದರು ಬ್ರಹ್ಮ ಸೂತ್ರಕೆ ಭಾಷ್ಯಗ್ರಂಥವ
ವರಸುಪ್ರಶಾಂತ ಕೋವಿದರು||
✍ ಪ್ರಶಾಂತ ಕುಮಾರ್ ಮಟ್ಟು