ಕಾಪು: ಇಲ್ಲಿನ ಶ್ರೀ ಹೊಸಮಾರಿಗುಡಿ ದೇವಸ್ಥಾನ ದಲ್ಲಿ ಪುನಃ ಪ್ರತಿಷ್ಠಾಪನೆಗೊಂಡು ಮಹಾಸ್ವರ್ಣ ಪೀಠದಲ್ಲಿ ಸ್ಥಿತಳಾಗಿರುವ ಶ್ರೀ ಮಾರಿಯಮ್ಮ ದೇವಿಯ ಮಹಾ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ನೆರೆದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರ ಜಯಘೋಷ ದೊಂದಿಗೆ ಬುಧವಾರ ಸಂಪನ್ನಗೊಂಡಿತು.
ಕೊರಂಗ್ರಪಾಡಿ ವೇ.ಮೂ. ಕೆ.ಜಿ. ರಾಘವೇಂದ್ರ ತಂತ್ರಿ ಮಾರ್ಗದರ್ಶನದಲ್ಲಿ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ದೇವಳದ ಪ್ರಧಾನ ಆರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಹಾಗೂ ವೈದಿಕ ವೃಂದದವರು ಬೆಳಿಗ್ಗೆ 8 ಗಂಟೆ ಸುಮೂರ್ತದಲ್ಲಿ ಮಹಾಸ್ನಪನ ನೆರವೇರಿಸಿದರು.
ಧಾರ್ಮಿಕ ಕಾರ್ಯದಂಗವಾಗಿ ಪೂರ್ವಾಹ್ನ ಮಂಗಲ ಗಣಯಾಗ, ಶಾಂಭವೀ ಕಲಾಮಾತೃ ಕಾರಾಧನಮ್, ಕಾಳರಾತ್ರಿಕಲಾ ಮಾತೃಕಾ ಮಂಡಲಾರ್ಚನಮ್, ಪ್ರತ್ಯಂಗಿರಾ ಕಲಾಮಾತೃಕಾ ಮಂಡಲಪೂಜನಮ್, ನ್ಯಾಸ ಪೂಜಾ ಇತ್ಯಾದಿ ನಡೆಸಲಾಯಿತು.
ಮಧ್ಯಾಹ್ನ ಮಹಾಪೂಜೆ, ಮಹಾಪ್ರಸಾದ ವಿತರಣೆ ನಡೆಯಿತು.
ಪಲ್ಲಪೂಜೆ ನಂತರ ಸಾರ್ವಜನಿಕ ಮಹಾಅನ್ನ ಸಂತರ್ಪಣೆ ನಡೆಯಿತು. ಲಕ್ಕಕ್ಕೂ ಮಿಕ್ಕಿದ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ.ದೇವಿಪ್ರಸಾದ್ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ವಿವಿಧ ಸಮಿತಿಗಳ ಪದಾಧಿಕಾರಿಗಳು, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.