ಫೆಬ್ರವರಿಯಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಉಡುಪಿ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಶಿವಪಾಡಿ ವೈಭವ ಕಾರ್ಯಕ್ರಮದಲ್ಲಿ ಆರೋಗ್ಯ ಮೇಳ ಪ್ರಮುಖ ಮೇಳಗಳಲ್ಲಿ ಒಂದಾಗಿತ್ತು. ಕೇವಲ ಹೆಸರಿಗಷ್ಟೇ ಈ ಮೇಳ ನಡೆಯದೆ ಅನೇಕ ಮಂದಿಗೆ ಆಶಾಕಿರಣವಾಗಿ ಕಂಗೊಳಿಸಿದೆ. ಇದೀಗ ಈ ವೈಭವಕ್ಕೆ ಮತ್ತೊಂದು ಮೆರುಗು ಬಂದಿದೆ.
ಆರೋಗ್ಯ ಮೇಳದಲ್ಲಿ ಪ್ರಸಾದ್ ನೇತ್ರಾಲಯದ ವತಿಯಿಂದ ಉಚಿತ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆ ಘೋಷಣೆಯಾಗಿತ್ತು. ಇದರನ್ವಯ ರತ್ನ ಸಂಜೀವ ಕಲಾ ಮಂಡಲ ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಕಣ್ಣಿನ ತಪಾಸಣೆ ನಡೆಸಿದ್ದರು. ಇದರಲ್ಲಿ ಸುಮಾರು 50 ಕ್ಕೂ ಅಧಿಕ ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ 200ಕ್ಕೂ ಅಧಿಕ ಮಂದಿಗೆ ಉಚಿತ ಕನ್ನಡಕ ವಿತರಣೆ ಆಗಿದ್ದು ಇದನ್ನು ಇಂದು ರತ್ನ ಸಂಜೀವ ಕಲಾ ಮಂಡಲದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸಾಂಕೇತಿಕವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತಮಾಡಿದ ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ ಡಾ.ಕೃಷ್ಣ ಪ್ರಸಾದ್ ಶಿವಪಾಡಿ ವೈಭವ ಕಾರ್ಯಕ್ರಮವನ್ನು ಕೊಂಡಾಡಿದರು. "ಶಿವಪಾಡಿ ವೈಭವ ಕಾರ್ಯಕ್ರಮ ಉಡುಪಿಗೆ ಮಾತ್ರವಲ್ಲದೇ ರಾಜ್ಯಕ್ಕೆ ಮಾದರಿಗಾಗಿದೆ. ಈ ಕಾರ್ಯಕ್ರಮ ನನಗೆ ಅತೀವ ಸಂತೋಷವನ್ನು ತಂದಿದೆ.ಬಡ ಜನತೆಗೆ ಸೇವೆ ಸಲ್ಲಿಸಲು ಈ ವೈಭವ ಅವಕಾಶ ಮಾಡಿಕೊಟ್ಟಿದೆ.
ಇಲ್ಲಿನ ಆಡಳಿತ ಮೊಕ್ತೇಸರರಾದ ಮಹೇಶ್ ಠಾಕೂರ್ ಹಾಗೂ ಅವರ ತಂಡ ಅತ್ಯಂತ ಯಶಸ್ವಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ಗ್ರಾಮವನ್ನು ದತ್ತು ತೆಗೆದು ಕೊಳ್ಳುವ ನಿರ್ಧಾರ ಮಾಡಿದ್ದೇವೆ. ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಪತ್ರ ತಂದಲ್ಲಿ ಈ ಗ್ರಾಮದ (ಸರಳೇಬೆಟ್ಟು-ಶಿವಪಾಡಿ) ಜನತೆಗೆ ಕನ್ನಡಕ ಹಾಗೂ ಶಸ್ತ್ರ ಚಿಕಿತ್ಸೆಯನ್ನು ನಮ್ಮ ಆಸ್ಪತ್ರೆಯ ವತಿಯಿಂದ ಉಚಿತವಾಗಿ ಮಾಡಿಕೊಡಲಾಗುವುದು" ಎಂದು ಹೇಳಿ ದರು.
ನಂತರ ಮಾತನಾಡಿದ ಶಿವಪಾಡಿ ಉಮಾಮಹೇಶ್ವರ ದೇಗುಲದ ಆಡಳಿತ ಮೊಕ್ತೇಸರರಾದ ಮಹೇಶ್ ಠಾಕೂರ್ "ಪ್ರಸಾದ್ ನೇತ್ರಾಲಯ ನಮ್ಮ ಊರಿಗೆ ಬೆಳಕು ನೀಡಿದೆ. ದೇವಸ್ಥಾನದ ವತಿಯಿಂದ ನಡೆದ ಈ ಕಾರ್ಯಕ್ರಮ ಇಷ್ಟೊಂದು ಪರಿಣಾಮ ಬೀರಿರುವುದನ್ನು ಕಂಡು ನಾವು ಭಾವುಕರಾಗಿದ್ದೇವೆ. ಇದೊಂದು ಸಾರ್ಥಕ್ಯದ ಅನುಭವ. ಡಾ.ಕೃಷ್ಣ ಪ್ರಸಾದ್ ರವರಿಗೆ ಗ್ರಾಮದ ಸಮಸ್ಥರ ಪರವಾಗಿ ಧನ್ಯವಾದಗಳು" ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ದಿನೇಶ್ ಪ್ರಭು, ಶಿವಪಾಡಿ ವೈಭವ ಕಾರ್ಯಕ್ರಮದ ಕಾರ್ಯದರ್ಶಿ ಪ್ರಕಾಶ್ ಕುಕ್ಕೇಹಳ್ಳಿ, ಟ್ರಸ್ಟಿಗಳಾದ ಪ್ರಕಾಶ್ ಪ್ರಭು, ಶ್ರೀಕಾಂತ್ ಪ್ರಭು ಹಾಗೂ ಡಾ.ರೇಶ್ಮಾ ಪೈ ಸೇರಿದಂತೆ ಇತರರು ಉಪಸ್ಥಿತರಿದ್ದರು.