ಕರಾವಳಿಯ ಸಾಂಸ್ಕೃತಿಕ ಸೌಹಾರ್ದತೆಗೆ ಯಕ್ಷಗಾನ ಅನನ್ಯ ಕೊಡುಗೆ ನೀಡಿದೆ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು
ಉಡುಪಿ : ಯಕ್ಷಗಾನ ಸಾಂಸ್ಕೃತಿಕವಾಗಿ ಸಮಾಜವನ್ನು ಒಗ್ಗೂಡಿಸುತ್ತದೆ. ಕೇವಲ ಹಿಂದೂಗಳಷ್ಟೇ ಅಲ್ಲ, ಅನ್ಯ ಧರ್ಮಿಯ ಕಲಾವಿದರು ಇಲ್ಲಿ ತೊಡಗಿಸಿಕೊಂಡಿರುವುದು ಈ ಕಲೆಯ ವೈಶಿಷ್ಟ್ಯವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಮಂಗಳೂರು ಗುರುಪುರದ ಮಾಣಿಬೆಟ್ಟು ಗುತ್ತು ವಠಾರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಮ್ಮಿ ಕೊಂಡ 'ಯಕ್ಷ ವಸುಂಧರ ' ಯಕ್ಷಗಾನ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನ ಅಕಾಡೆಮಿ ಸಾಂಪ್ರಾದಾಯಿಕ ಯಕ್ಷಗಾನವನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಇಂದಿನ ಬದಲಾವಣೆಯ ಯುಗದಲ್ಲಿ ಯಕ್ಷಗಾನದಲ್ಲೂ ಹಲವಾರು ಬದಲಾವಣೆಯ ಪ್ರಯೋಗಗಳು ನಡೆಯುತ್ತಿವೆ. ಕೆಲವೊಂದು ವಿಚಾರಗಳಲ್ಲಿ ಯಕ್ಷಗಾನ ಕಲಾವಿದರು ರಂಗಚೌಕಟ್ಟನ್ನು ಮೀರಿ ಹೋಗುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಕಾರ್ಯವನ್ನು ಯಕ್ಷಗಾನ ಅಕಾಡೆಮಿ ಮಾಡಬೇಕು ಎಂದು ಹಲವಾರು ದೂರುಗಳು ಅಕಾಡೆಮಿಯನ್ನು ತಲುಪಿವೆ. ಈ ಅಭಿಪ್ರಾಯವನ್ನೆಲ್ಲಾ ನಾವು ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.
ಇಂದು ಯಕ್ಷಗಾನಕ್ಕೆ ಎಲ್ಲೆಡೆ ಪ್ರೋತ್ಸಾಹ ಸಿಗುತ್ತಿದೆ. ಧಾರ್ಮಿಕ ಕೇಂದ್ರಗಳು ತಾವೇ ಯಕ್ಷಗಾನ ಮೇಳಗಳನ್ನು ನಡೆಸುವ ಮೂಲಕ ಈ ಕಲೆಯನ್ನು ಪೋಷಿಸುತ್ತಿವೆ, ಬೆಳೆಸುತ್ತಿವೆ. ಅಕಾಡೆಮಿ ಕೂಡಾ ನಾಡಿನಾದ್ಯಂತ ಯಕ್ಷಗಾನಕ್ಕೆ ಸಂಬoಧಪಟ್ಟ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದೆ.
ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಸೇರಿದಂತೆ ರಾಜ್ಯ ಸರಕಾರ ಯಕ್ಷಗಾನವೂ ಸೇರಿದಂತೆ ನಾಡಿನ ಸಾಂಸ್ಕೃತಿಕ ಕಲೆಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡುತ್ತಿದ್ದಾರೆ. ಸರಕಾರ ಅಕಾಡೆಮಿಗೆ ನೀಡುವ ಅನುದಾನ ಸದ್ವಿನಿಯೋಗವಾಗಬೇಕು. ಅದು ಕಲೆಯ ಬೆಳೆವಣಿಗೆಗೆ, ಕಲಾವಿದರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಸಮಾಜ ನಮ್ಮೊಡನೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋಳಿದಡಿ ಗುತ್ತು ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನವೊಂದು ನಾದ ವಿದ್ಯೆ, ಸಮಾಜದ ಮೃಗೀಯ ಪ್ರವೃತ್ತಿಯನ್ನು ಹತೋಟಿಗೆ ತರುವಂತಹ ಪ್ರಾಚೀನ ವಿದ್ಯೆ. ಮನುಷ್ಯನ ಮನಸ್ಸಿನ ಮೇಲೆ ಪ್ರಭಾವ ಬೀರುವ ವಿದ್ಯೆ. ಈ ನಿಟ್ಟಿನಲ್ಲಿ ಈ ಯಕ್ಷಗಾನ ಕಮ್ಮಟ ಬಹಳ ಅರ್ಥಪೂರ್ಣವಾದದ್ದು. ಯಕ್ಷಗಾನಕ್ಕೆ ಕೊಡುಗೆ ನೀಡಿ ಅಗಲಿರುವ ಮಹಾನ್ ಕಲಾವಿದರ ಬಗ್ಗೆ ಅಕಾಡೆಮಿಯಿಂದ ಅಧ್ಯಯನ ನಡೆಯಬೇಕು. ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ಯಕ್ಷಗಾನ ಮುಂದುವರಿಯಬೇಕು. ಇದರಿಂದ ಸಮಾಜದ ವಿಕೃತಿ ಕಡಿಮೆಯಾಗುತ್ತದೆ ಎಂದರು.
ಮುಖ್ಯ ಅತಿಥಿ ವಿಶ್ರಾಂತ ಪ್ರಾಚಾರ್ಯ, ಕಂಬಳದ ಸಂಯೋಜಕ ಗುಣಪಾಲ ಕಡಂಬ ಮಾತನಾಡಿ, ಯಕ್ಷಗಾನ ಕರ್ನಾಟಕ ಕರಾವಳಿಯ ಶ್ರೇಷ್ಠ ಕಲಾ ಪರಂಪರೆಯನ್ನು ಉಳಿಸಿ ಬೆಳೆಸಿದೆ. ಯಕ್ಷಗಾನವನ್ನು ಉಳಿಸುವುದು ಹಾಗೂ ಅದರ ಪೂರ್ಣರೂಪ ವನ್ನು ಕಂಡುಕೊoಡು ಅದನ್ನು ಬೆಳೆಸುವ ಕೆಲಸ ಇಂದು ನಡೆಯಬೇಕಿದೆ ಎಂದರು.
ಗುರುಪುರ ಕಂಬಳದ ಅಧ್ಯಕ್ಷ ಇನಾಯತ್ ಅಲಿ ಮಾತನಾಡಿ, ಗುರುಪುರ ಕಂಬಳ ನಡೆಯುತ್ತಿರುವ ಈ ಸಂದರ್ಭದಲ್ಲಿ ಯಕ್ಷಗಾನ ಕಮ್ಮಟವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಗಂಜಿಮಠ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಗುರುಪುರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಕೆಪಿಸಿಸಿ ಸದಸ್ಯ ಪ್ರಥ್ವಿರಾಜ್, ಸದಾಶಿವ ಶೆಟ್ಟಿ, ಲಕ್ಷ್ಮೀಶ, ಯಕ್ಷಗಾನ ಅಕಾಡೆಮಿ ಸದಸ್ಯರಾದ ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟು ಉಪಸ್ಥಿತರಿದ್ದರು.
ಅಕಾಡೆಮಿಯ ರಿಜಿಸ್ಟ್ರಾ ರ್ ನಮ್ರತಾ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯರಾದ ಸತೀಶ್ ಅಡಪ ಸ್ವಾಗತಿಸಿ, ಕೃಷ್ಣಪ್ಪ ಪೂಜಾರಿ ಕೀನ್ಯಾ ವಂದಿಸಿದರು. ರೋಹಿತ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಕಮ್ಮಟದಲ್ಲಿ ತೆಂಕು ತಿಟ್ಟು ಯಕ್ಷಗಾನದ ಸ್ಥಿತ್ಯಂತರಗಳು ಎಂಬ ಶೀರ್ಷಿಕೆಯಡಿ ಹಿರಿಯ ಯಕ್ಷಗಾನ ಕಲಾವಿದ ಡಾ.ತಾರಾನಾಥ ವರ್ಕಾಡಿ ಪ್ರಸ್ತಾವನೆ ಮಂಡಿಸಿದರು.
ಭಾಗವತಿಕೆ, ಅರ್ಥಗಾರಿಕೆ, ಮುಖವರ್ಣಿಕೆ, ವೇಷಭೂಷಣ, ಸ್ತ್ರೀ ವೇಷ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಿತು. ಬಲ್ಲಿರೇನಯ್ಯ ಮಿತ್ರ ಮಂಡಳಿ ಬೆಳ್ಮಣ್ ವತಿಯಿಂದ ತಾಳಮದ್ದಲೆ 'ನ್ಯಾಸ ಸಂಪ್ರದಾನ' ಪ್ರಸ್ತುತಿಗೊಂಡಿತು. ರಾತ್ರಿ ಆಹೋ ರಾತ್ರಿ ಯಕ್ಷಗಾನ ಪ್ರದರ್ಶನಗೊಂಡಿತು.